*ಕರ್ನಾಟಕ ಬಾಲವಿಕಾಸ ಅಕಾಡೆಮಿ ಕಛೇರಿಯ ಆವರಣದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ*

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ ಜೂ.6: ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕಛೇರಿಯ ಆವರಣದಲ್ಲಿ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಗಿಡ ನೆಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಮಕ್ಕಳಿಗೆ ಸಸಿಗಳನ್ನು ವಿತರಿಸಿ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತಾ, ಮಕ್ಕಳಿಗೆ ಶಾಲೆಗೆ ಹೋಗುವಾಗ ಮತ್ತು ಬರುವಾಗ ಕಸವನ್ನು ಎಲ್ಲೆಂದರೆಲ್ಲಿ ಎಸೆಯದಿರುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರು ಮತ್ತು ವಿದ್ಯುತ್ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಹಾಗೂ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಪಾತ್ರೆ ಇಡುವುದರ ಕುರಿತು ಮಕ್ಕಳಿಗೆ ಅವರು ತಿಳಿಸಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಅಡಿವೇಶ ಗಿ. ಇಟಗಿ ಅವರು ಒಟ್ಟು 80 ಸಸಿಗಳನ್ನು ವಿತರಿಸಿ, ಶಾಲೆಯಲ್ಲಿ ಅಥವಾ ಮನೆಯ ಸುತ್ತಲಿನ ಜಾಗದಲ್ಲಿ ಮಕ್ಕಳಿಗೆ ಸಸಿಗಳನ್ನು ನೆಟ್ಟು ನೀರು ಹಾಗೂ ಗೊಬ್ಬರ ಹಾಕಿ ಪೋಷಿಷಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಜೂನ್ ತಿಂಗಳಲ್ಲಿ ಜನಿಸಿದ 39 ಮಕ್ಕಳನ್ನು ಆಹ್ವಾನಿಸಿ, ಮಕ್ಕಳ ಹೆಸರಿನಲ್ಲಿ ನಾಮಫಲಕವನ್ನು ತಯಾರಿಸಿ, ಮಗು ನೆಡುವ ಗಿಡದ ಜೊತೆಗೆ ಇರಿಸಲಾಯಿತು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ವಿರೂಪಾಕ್ಷಗೌಡ ಪಿ. ಪಾಟೀಲ ಅವರು ಗಿಡಗಳು ನಿಮ್ಮೊಂದಿಗೆ ಬೆಳೆದು ನಿಮ್ಮ ಪರಿಸರದ ಪ್ರೀತಿಯ ಸಂಕೇತವಾಗಲಿ ಎಂದು ಹೇಳಿದರು.
ಆಪ್ತಕಾರ್ಯದರ್ಶಿ ಅನ್ನಪೂರ್ಣ ಸಂಗಳದ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಕಾಡೆಮಿ ಸಮಿತಿ ಸದಸ್ಯರು, ಅಕಾಡೆಮಿಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು, ಗಾಂಧೀನಗರದ ಜಿ.ಹೆಚ್.ಪಿ.ಎಸ್ ನಂ-5 ಶಾಲೆಯ ಮಕ್ಕಳು, ಶಿಕ್ಷಕರು ಹಾಜರಿದ್ದರು.*********************************






