
ಕಾಗವಾಡ ಶಾಸಕರಾದ ರಾಜು ಕಾಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ತಮಗೆ ಯಾವ ಖಾತೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ ಎಂದಿರುವ ಅವರು, ಯಾವ ವರಿಷ್ಠರ ಬಳಿಯೂ ಸಚಿವ ಸ್ಥಾನ ಕೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅನಾರೋಗ್ಯದ ಕಾರಣ ಶಾಸಕಾಂಗ ಸಭೆಗೆ ಗೈರಾಗುವುದಾಗಿಯೂ ತಿಳಿಸಿದ್ದಾರೆ.
“ನಾನು ಯಾವ ಸಚಿವ ಸ್ಥಾನಕ್ಕೂ ಆಸೆಪಟ್ಟವನಲ್ಲ. ಆದರೆ, ನನ್ನನ್ನು ಗುರುತಿಸಿ ಸಚಿವ ಸಂಪುಟಕ್ಕೆ ಕರೆದರೆ, ಯಾವ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ನನಗಿದೆ” ಎಂದು ರಾಜು ಕಾಗೆ ಹೇಳಿದ್ದಾರೆ.
ಸಚಿವ ಸ್ಥಾನಕ್ಕಾಗಿ ನಾನು ಇದುವರೆಗೆ ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ ಅಥವಾ ಅವರಿಗೆ ಮನವಿ ಸಲ್ಲಿಸಿಲ್ಲ. ನಾನು ‘ಒನ್ ಮ್ಯಾನ್ ಶೋ’, ನಾನು ‘ಟೈಗರ್’ ಇದ್ದಂತೆ, ನನಗೆ ಯಾರ ಬೆಂಬಲವೂ ಬೇಕಿಲ್ಲ ಎಂದು ತಮ್ಮ ಸ್ವತಂತ್ರ ನಿಲುವನ್ನು ಪ್ರತಿಪಾದಿಸಿದರು.
“ಮುಖ್ಯಮಂತ್ರಿಗಳು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ರಚನೆ ಕುರಿತು ತೀರ್ಮಾನಿಸುತ್ತಿದ್ದಾರೆ. ಅವರಿಗೆ ತೊಂದರೆ ಕೊಡಬಾರದು ಎಂಬ ಕಾರಣಕ್ಕೆ ನಾನು ಹೋಗಿ ಏನನ್ನೂ ಕೇಳಿಲ್ಲ” ಎಂದು ತಮ್ಮ ಮೌನದ ಹಿಂದಿನ ಉದ್ದೇಶ ತಿಳಿಸಿದ್ದಾರೆ.
ಸದ್ಯ 140 ಶಾಸಕರಿದ್ದು, ಅದರಲ್ಲಿ 33 ಜನ ಮಾತ್ರ ಮಂತ್ರಿಗಳಾಗಲು ಸಾಧ್ಯ. ಹೀಗಿರುವಾಗ ಎಲ್ಲ 140 ಜನರೂ ಮಂತ್ರಿ ಆಗಬೇಕು ಎಂದು ಬಯಸುವುದು ವರಿಷ್ಠರಿಗೆ ತೊಂದರೆ ತರುತ್ತದೆ ಎಂದು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದರು.
“ನನಗೆ ಸಚಿವ ಸ್ಥಾನ ಸಿಕ್ಕರೂ ಸಂತೋಷ, ಸಿಗದಿದ್ದರೂ ಸಂತೋಷ. ನಾನು ಸಚಿವ ಸ್ಥಾನ ಸಿಗಲಿಲ್ಲವೆಂದು ಸಮಾಧಾನ ಕಳೆದುಕೊಳ್ಳುವ ವ್ಯಕ್ತಿಯಲ್ಲ” ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಇಂದು ನಡೆಯಲಿರುವ ಸಿಎಲ್ಪಿ ಮೀಟಿಂಗ್ಗೆ ಅನಾರೋಗ್ಯದ ಕಾರಣ ಹಾಜರಾಗುವುದಿಲ್ಲ ಎಂದು ರಾಜು ಕಾಗೆ ತಿಳಿಸಿದ್ದಾರೆ. ಈ ಕುರಿತು ಶಾಸಕಾಂಗ ಸಭೆಗೆ ಪತ್ರವನ್ನೂ ನೀಡಿರುವುದಾಗಿ ಅವರು ದೃಢಪಡಿಸಿದರು.
ಮುಂದಿನ ಎಂಟು ದಿನಗಳ ಕಾಲ ಬೆಂಗಳೂರಿನಲ್ಲಿಯೇ ಇರಲಿರುವ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾರ್ಯಗಳ ಕುರಿತು ವರಿಷ್ಠರನ್ನು ಭೇಟಿ ಮಾಡುತ್ತೇನೆ. ನನ್ನ ಅಧಿಕಾರಕ್ಕಾಗಿ ಯಾವುದೇ ರಿಕ್ವೆಸ್ಟ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ಸರಿಯಲ್ಲ ಎಂದೂ ಹೇಳಿದರು.
ಇದನ್ನು ಓದಿ:











