*ಬೆಮುಲ್ ನಿಂದ ರಾಸು ವಿಮೆಯ ಚೆಕ್ ವಿತರಿಸಿದ ಸರ್ವೋತ್ತಮ ಜಾರಕಿಹೊಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ಬೆಮುಲ್ ಅಡಿಯಲ್ಲಿ ಮೃತಪಟ್ಟ ರಾಸುಗಳಿಗೆ ವಿಮಾ ಸೌಲಭ್ಯದ ಚೆಕ್ಗಳನ್ನು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿಯವರು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸರ್ವೋತ್ತಮ ಜಾರಕಿಹೊಳಿಯವರು ರೈತರಿಗಾಗಿ ಬೆಮುಲ್ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗುವಂತೆ ರೈತರಿಗೆ ತಿಳಿಸಿದರು.
ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನಲ್ಲಿ ಕಳೆದ ಸಾಲಿನಲ್ಲಿ ಗೋಕಾಕ ತಾಲ್ಲೂಕಿನಲ್ಲಿ 1700 ಮತ್ತು ಮೂಡಲಗಿ ತಾಲ್ಲೂಕಿನಲ್ಲಿ ಸುಮಾರು 1800 ರಾಸುಗಳಿಗೆ ವಿಮಾ ಸೌಲಭ್ಯಗಳನ್ನು ಮಾಡಿಸಲಾಗಿದೆ. ಮೃತಪಟ್ಟ ರಾಸುಗಳಿಗೆ 60 ಸಾವಿರ ರೂ.ವಿಮೆಯನ್ನು ನೀಡಲಾಗುತ್ತಿದೆ. ಒಟ್ಟು 1955 ರೂ.ಮೊತ್ತದ ರಾಸು ವಿಮೆಯಲ್ಲಿ ರೈತರು ಕೇವಲ 454 ರೂ. ತುಂಬಿದರೆ ಉಳಿದವು ಶೇ. 75 ರಷ್ಟು ಹಣವನ್ನು ಬೆಮುಲ್ ಪಾವತಿಸುತ್ತಿದೆ. ಬೆಮುಲ್ ರೈತರಿಗಾಗಿ ಹಲವು ಸವಲತ್ತುಗಳನ್ನು ಮಾಡಿದೆ. ರೈತರು ಸಹ ಗುಣಮಟ್ಟದ ಹಾಲು ಪೂರೈಕೆ ಮಾಡಬೇಕು. ಇದರಿಂದ ಡೈರಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಸರ್ವೋತ್ತಮ ಅವರು ಇದೇ ಸಂದರ್ಭದಲ್ಲಿ ಮೃತಪಟ್ಟ 17 ರಾಸುಗಳ ಮಾಲೀಕರಿಗೆ ಸುಮಾರು 8.50 ಲಕ್ಷ ರೂಪಾಯಿ ಚೆಕ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬೆಮುಲ್ ನಿರ್ದೇಶಕ ಮಲ್ಲಪ್ಪ ಪಾಟೀಲ, ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ, ಗೋಕಾಕ ಉಪ ಕೇಂದ್ರದ ಅಧಿಕಾರಿ ಡಾ. ವೀರಣ್ಣಾ ಕೌಜಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.*********************************






