ಪ್ರಕೃತಿ ಬೆಳಗಾವಿ

*ಗ್ಯಾರಂಟಿ ಸರ್ಕಾರದ ಆಡಳಿತದಲ್ಲಿ ಹಾಸ್ಟೆಲ್ ಅನುದಾನಕ್ಕೂ ಕತ್ತರಿ : ಸಂಸದ ಶೆಟ್ಟರ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಊಟ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ನೀಡಬೇಕಾದ ಕೋಟ್ಯಾಂತರ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸಂಸದರಾದ ಶ್ರೀ ಜಗದೀಶ ಶೆಟ್ಟರ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಸೇರಿ ಒಟ್ಟು 1939 ವಿದ್ಯಾರ್ಥಿ ವಸತಿ ನಿಲಯಗಳಿಗೆ ಕಳೆದ ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳ ಭೋಜನ ವೆಚ್ಚ, ಕಟ್ಟಡ ಬಾಡಿಗೆ ಹಾಗೂ ನಿರ್ವಹಣೆ ವೆಚ್ಚ ಸೇರಿ ಒಟ್ಟು 370 ಕೋಟಿಗೂ ಅಧಿಕ ಅನುದಾನ ಬಾಕಿ ಉಳಿದಿದೆ.

ನಮ್ಮ ಬೆಳಗಾವಿ ಜಿಲ್ಲೆಯ ಹಾಸ್ಟೆಲ್ ಗಳ ಬಾಕಿ 29 ಕೋಟಿ ರೂಪಾಯಿಗಳು, ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಪೋಷಕರು ನೂರಾರು ಕನಸುಗಳನ್ನು ಹೊತ್ತು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್ ಗಳಿಗೆ ಸೇರಿಸಿದರೆ, ಮಕ್ಕಳಿಗೆ ಮೂಲಭೂತವಾಗಿ ನೀಡಬೇಕಾದ ಸೌಲಭ್ಯಗಳಿಗೂ ಸಹ ಕೊರತೆ ಮಾಡುವುದು ಖಂಡನೀಯ.

ಸರ್ಕಾರ ಆದಷ್ಟು ಬೇಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಬಾಕಿ ಉಳಿಸಿಕೊಂಡ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.***********************************

Back to top button