*ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ, ಇವರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ಮೊಹಮ್ಮದ್ ರೋಶನ್ ಇವರ ಉಪಸ್ಥಿಯಲ್ಲಿ ಕೇಂದ್ರ ಸರಕಾದ ವಿಮಾನಯಾನ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೇಲ್ವೆ ಇಲಾಖೆಗಳು ಕೈಕೊಳ್ಳುತ್ತಿರುವ ಹಾಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯ ಕುರಿತು ಚರ್ಚಿಸಿದರು.
ವಿಮಾನ ನಿಲ್ದಾಣ :
ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿದಂತೆ “ಪ್ಯಾರೆಲೆಲ್ ಟ್ಯಾಕ್ಸಿ ಟ್ರ್ಯಾಕ” ನಿರ್ಮಾಣಕ್ಕೆ ಬೆಳಗಾವಿ ವಾಯು ಸೇನೆಯಿಂದ ಸುಮಾರು 16 ಎಕರೆ ಜಮೀನು ಹಸ್ತಾಂತರದ ಅಗತ್ಯವಿರುವ ಕುರಿತು ಚರ್ಚಿಸಲಾಗಿ ಈ ಕುರಿತು ಇನ್ನುವರೆಗೆ ಅಗತ್ಯ ಮಾಹಿತಿಯು ರಕ್ಷಣಾ ಪೋರ್ಟಲ್ದಲ್ಲಿ ಅಳವಡಿಸಲಾಗಿಲ್ಲವಾದ ಪ್ರಯುಕ್ತ ಈ ಕುರಿತು ಕೂಡಲೆ ವಿಮಾನಯಾನ ಪ್ರಾಧಿಕಾರ ನಿರ್ದೆಶಕರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ, ಅಗತ್ಯ ಮಾಹಿತಿಯನ್ನು ರಕ್ಷಣಾ ಇಲಾಖೆಯ ಪೋರ್ಟಲ್ ದಲ್ಲಿ ಅಳವಡಿಸಲು ಕ್ರಮ ಕೈಕೊಳ್ಳಲು ಸೂಚಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ:-
ಹಲಗಾ ಮಚ್ಚೆ ಬೈ-ಪಾಸ್ ರಸ್ತೆ ಮತ್ತು ರಿಂಗ್ ರೋಡ :
ಹಲಗಾ – ಮಚ್ಚೆ ನಡುವೆ ಇರುವ 14 ಕಿ.ಮಿ ಒಟ್ಟು ರಸ್ತೆಯಲ್ಲಿ ಈಗಾಗಲೇ ಒಂಬತ್ತು ಕಿ.ಮಿ ರಸ್ತೆಯ ಕಾಮಗಾರಿ ಮುಗಿದಿದ್ದು, ಕೇವಲ 3.5 ಕಿ.ಮಿ ರಸ್ತೆಯ
ನಿರ್ಮಾಣದಲ್ಲಿ ಸಮಸ್ಯೆ ಇದ್ದುದರ ಬಗ್ಗೆ ಧಾರವಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.
ಪ್ರಸ್ತಾಪಿತ ವಿಷಯವಾಗಿ ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವಲ್ಲಿ ವಿಳಂಬವಾಗುತ್ತಿದ್ದು, ಅಧಿಕಾರಿಗಳು ಉದಾಸಿನತೆ ತೊರದೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಂಸದರು ಮತ್ತು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ಯಾಕೇಜ್-1, 2 ಮತ್ತು 3 ಅನುಗುಣವಾಗಿ ಬೆಳಗಾವಿ ನಗರದ ಹತ್ತಿರ ನಿರ್ಮಿಸಲಾಗುತ್ತಿರುವ ರಿಂಗ್ ರಸ್ತೆ ಪ್ರಗತಿಯ ಬಗ್ಗೆಯೂ ಸಹ ವಿಚಾರಿಸಲಾಗಿ, ಈಗಾಗಲೇ ಭೂಸ್ವಾಧೀನಕ್ಕೆ 80% ಪರಿಹಾರ ಧನ ಹಂಚಿಕೆಯಾಗಿದ್ದು, ಪ್ಯಾಕೇಜ್-1, ಕಾಮಗಾರಿ ಪ್ರಾರಂಭಿಸಲು ಟೆಂಡರ್ ಅಹ್ವಾನಿಸುವ ಬಗ್ಗೆ ಅಗತ್ಯ ಅನುಮೋದನೆ ನೀಡುವ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಶೀಘ್ರ ಭೇಟಿ ಮಾಡಿ, ಚರ್ಚಿಸುವುದಾಗಿ ಸಂಸದರು ಅಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ – ಹುನಗುಂದ ರಾಯಚೂರ ರಸ್ತೆ
ಪ್ಯಾಕೇಜ್ -1 ರಡಿ ಇರುವ 43.8 ಕಿ.ಮಿ ಉದ್ದಳತೆಯ ಈ ರಸ್ತೆಯ ನಿರ್ಮಾಣಕ್ಕೆ ಸಂಬಂಧಿಸಿದಂತೆ, ಭೂಸ್ವಾಧೀನ ಕಾರ್ಯದ ಬಗ್ಗೆ ಬಾಗಲಕೋಟೆಯ ವಿಶೇಷ ಭೂಸ್ವಾಧೀನ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಲಾಗಿ, ಇದರಲ್ಲಿ ಈಗಾಗಲೇ 37 ಕಿ.ಮಿ ಉದ್ದಳತೆ ಅವಶ್ಯವಿರುವ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡಿರುವ ಬಗ್ಗೆ ಮತ್ತು ಇನ್ನು 5 ಕಿ.ಮಿ ಮಾತ್ರ ಬಾಕಿ ಉಳಿದಿರುವ ಬಗ್ಗೆ ಸಭೆಗೆ ತಿಳಿಸಲಾಯಿತು, 20 ನೇ ಜುಲೈ, 2026 ಒಳಗಾಗಿ ಇದನ್ನು ಸಹ ಪೂರ್ಣಗೊಳಿಸಲು ಸಂಸದರು ಸೂಚಿಸಿದರು.
ಅದರಂತೆ ಕೆಲವು ಗ್ರಾಮಗಳ ಹತ್ತಿರ ಸರ್ವಿಸ್ ರಸ್ತೆ ಇರದೆ ಇರುವ ಬಗ್ಗೆ ಮತ್ತು ರೈತರು ಅವರ ಜಮೀನುಗಳಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದು, ಈ ಮಾರ್ಗದಲ್ಲಿ ಅಗತ್ಯವಿರುವ ಗ್ರಾಮಗಳಿಗೆ ಸರ್ವಿಸ್ ರಸ್ತೆ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗೆ ಮನ್ನಣೆ ನೀಡುವ ಬಗ್ಗೆ ಸೂಚಿಸಿದರು.
ರೇಲ್ವೆ ಇಲಾಖೆ :-
ಬೆಳಗಾವಿ ಟಿಳಕವಾಡಿ ಹತ್ತಿರ ಎಲ್.ಸಿ ನಂ: 381 ಹತ್ತಿರ ಎರಡನೇಯ ಲೇನ ನಿರ್ಮಾಣದ ಬಗ್ಗೆ ಪ್ರಗತಿ ವಿವರವನ್ನು ಸಂಸದರು ಅಧಿಕಾರಿಗಳಿಂದ ಪಡೆದುಕೊಂಡು, ಆದಷ್ಟು ಬೇಗನೆ ಕಾಮಗಾರಿಯನ್ನು ಸಹ ಪ್ರಾರಂಭಿಸುವ ಬಗ್ಗೆ ಅಧಿಕಾರಿಗಳಿಗೆ ಸಂಸದರು ಹಾಗೂ ಜಿಲ್ಲಾಧಿಕಾರಿಗಳು ಸೂಚಿಸಿದರು.
ಈ ಸಭೆಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಗಳಾದ ಶ್ರೀ ಅಶೋಕ ತೇಲಿ ( ವಿ.ಸಿ ಮುಖಾಂತರ), ಮತ್ತು ಶ್ರೀ ಚೌಹಾಣ, ಧಾರವಾಡ/ ಬಾಗಲಕೋಟೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶ್ರೀ ಭೂವನೇಶ ಕುಮಾರ, ಶ್ರೀ ಪವನ ಗುರ್ವೆ, ವಿಮಾನಯಾನ ಪ್ರಾಧಿಕಾರದ ನಿರ್ದೆಶಕರಾದ ಶ್ರೀ ತ್ಯಾಗರಾಜನ್, ರೇಲ್ವೆ ಉಪ ಅಭಿಯಂತರರಾದ ಶ್ರೀ ವಿನಾಯಕ, ಪೊಲೀಸ್ ಕಮಿಷನರ್ ಶ್ರೀ ಭೂಷಣ್ ಉಪಸ್ಥಿತರಿದ್ದರು.********************************











