ಪ್ರಕೃತಿ ಬೆಳಗಾವಿ

*ಗ್ರಾಮೀಣ ಭಾಗಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ: ಸಚಿವ ರಾಮಲಿಂಗಾರೆಡ್ಡಿ*

*ಚನ್ನಮ್ಮನ‌ ಕಿತ್ತೂರು ನೂತನ‌ ಬಸ್ ಘಟಕ‌ ಉದ್ಘಾಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ, ಮೇ.04 : ರಾಜ್ಯ ಸರಕಾರದ ವತಿಯಿಂದ ಅನೇಕ ಜನಪರ‌‌ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ರಾಜ್ಯದ ಜನರ ಜೀವನ‌ಮಟ್ಟ ಸುಧಾರಿಸುವ ಕಾರ್ಯವಾಗುತ್ತಿದೆ. ಚನ್ನಮ್ಮ‌ ಕಿತ್ತೂರಿನಲ್ಲಿ ಉದ್ಘಾಟನೆಗೊಂಡಂತಹ ಹೊಸ ಬಸ್ ಘಟಕದಿಂದ ಈ ಭಾಗದ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಚನ್ನಮ್ಮನ‌ ಕಿತ್ತೂರು ನೂತನ ಬಸ್ ಘಟಕದ ಆವರಣದಲ್ಲಿ ಸೋಮವಾರ(ಮೇ.4) ಚನ್ನಮ್ಮನ‌ಕಿತ್ತೂರು ನೂತನ‌ ಬಸ್ ಘಟಕ‌ ಉದ್ಘಾಟಿಸಿ, ಹೊಸ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಚನ್ನಮ್ಮನ ಕಿತ್ತೂರಿನ‌ಲ್ಲಿ ಅಂದಾಜು ಐದು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾದಂತಹ ಸುಸಜ್ಜಿತ ನೂತನ ಬಸ್ ಘಟಕದಲ್ಲಿ ಪೆಟ್ರೋಲ್ ಬಂಕ್ ಸ್ಥಾಪಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ಬಾರಿ ಸಾರಿಗೆ ಸಚಿವರಾಗಿದ್ದ ಸಮಯದಲ್ಲೂ‌ ಅನೇಕ‌ ಬಸ ನಿಲ್ದಾಣಗಳನ್ನು ‌ನಿರ್ಮಾಣ‌ ಮಾಡಲಾಗಿದೆ. ನಮ್ಮ ಸರಕಾರದ ಅವಧಿಯಲ್ಲಿ ಅನುಕಂಪದ‌ ಆಧಾರದ ಮೇಲೆ‌ ಹತ್ತು ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳ ಅವಧಿಯಲ್ಲಿ 1200 ಹೊಸ ಬಸಗಳನ್ನು‌ ನೀಡಲಾಗಿದೆ. ಬೆಳಗಾವಿಯ ಕೇಂದ್ರ ಹಾಗೂ ನಗರ ಬಸ ನಿಲ್ದಾಣಗಳನ್ನು ಈಗಾಗಲೇ ಉದ್ಘಾಟಿಸಲಾಗಿದೆ. ಚನ್ನಮ್ಮ ಕಿತ್ತೂರಿನ ಹೊಸ ಬಸ್ ಘಟಕದಲ್ಲಿ‌ ಕಾಂಕ್ರೀಟ್ ಕಾಮಗಾರಿಯನ್ನು ಶೀಘ್ರವೇ ಕೈಗೊಳ್ಳಲಾಗುವುದು.

ಹೊಸದಾಗಿ ನಿರ್ಮಾಣವಾದಂತಹ ಚನ್ನಮ್ಮನ ಕಿತ್ತೂರು ಬಸ್ ಘಟಕಕ್ಕೆ ಹದಿನೈದು ಹೊಸ ಬಸ್ ಗಳನ್ನು ನೀಡಲಾಗಿದೆ. ಈ ಬಸ್ ಗಳನ್ನು ಗ್ರಾಮೀಣ ಭಾಗದ ಜನರಿಗೆ ಹಾಗೂ ಮುಖ್ಯವಾಗಿ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಸಚಿವರಾದ ರಾಮಲಿಂಗಾರೆಡ್ಡಿ ಅವರು ಸೂಚಿಸಿದರು

ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ, ಚನ್ನಮ್ಮನ ಕಿತ್ತೂರಿನಲ್ಲಿ ನೂತನ ಬಸ್ ಘಟಕ‌ ನಿರ್ಮಾಣದ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಚನ್ನಮ್ಮನ ಕಿತ್ತೂರು ಐತಿಹಾಸಿಕ ಸ್ಥಳವಾಗಿದ್ದು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವದು ಹಾಗೂ ಗ್ರಾಮೀಣ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವ ಉದ್ದೇಶದೊಂದಿಗೆ ಈ ಘಟಕ ಆರಂಭಿಸಲಾಗಿದೆ ಎಂದರು.

ಮುಂಚೆ ಈ ಭಾಗದ ಗ್ರಾಮೀಣ ವಿಧ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಲು ತುಂಬಾ ಅನಾನುಕೂಲವಾಗುತ್ತಿತ್ತು. ಇಂದು ಚನ್ನಮ್ಮನ ಕಿತ್ತೂರಿನ ಹೊಸ ಬಸ್ ಘಟಕಕ್ಕೆ ಹದಿನೈದು ಹೊಸ ಬಸ್ ಗಳನ್ನು ನೀಡಲಾಗಿದ್ದು, ಇದರಿಂದಾಗಿ ಈ ಭಾಗದ ಗ್ರಾಮೀಣ ಜನರಿಗೆ (Mahithi Kanaja) ಹಾಗೂ ವಿಧ್ಯಾರ್ಥಿಗಳಿಗೆ ಉತ್ತಮ‌ ಸಾರಿಗೆ ವ್ಯವಸ್ಥೆ ನೀಡಲಾಗುವುದು ಎಂದರು.

ಚನ್ನಮ್ಮನ ಕಿತ್ತೂರು ಬಸ್ ನಿಲ್ದಾಣದಲ್ಲಿನ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅನುದಾನ ಹಾಗೂ ಈ ಭಾಗದಲ್ಲಿ ಸ್ಥಳೀಯವಾಗಿ ಸುಗಮ‌ ಸಂಚಾರಕ್ಕೆ ಹೊಸ ಮಿನಿ ಬಸ್ ಗಳನ್ನು‌ ಪೂರೈಸಲು ಸಾರಿಗೆ ಸಚಿವರಲ್ಲಿ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಮನವಿ ಮಾಡಿದರು.

ವಾ.ಕ.ರ.ಸಾ.ಸಂಸ್ಥೆ ಉಪಾಧ್ಯಕ್ಷರಾದ ಸುನೀಲ ಹನುಮಣ್ಣವರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ವಿನಯ ನಾವಲಗಟ್ಟಿ,
ವಾಕರಸಾ ಸಂಸ್ಥೆ ವ್ಯವಸ್ಥಾಪಕ‌‌ ನಿರ್ದೇಶಕಿ ಪ್ರಿಯಾಂಗಾ ಎಂ.,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ವಿಭಾಗೀಯ ನಿಯಂತ್ರಣಾಧಿಕಾರಿಗಳು, ಘಟಕ ವ್ಯವಸ್ಥಾಪಕರು, ಸಾರ್ವಜನಿಕರು ಸಿಬ್ಬಂದಿಗಳು ಉಪಸ್ಥಿತರಿದ್ದರು.******************************

Back to top button