ಪ್ರಕೃತಿ ಬೆಳಗಾವಿ

*ಮಹಾಜನ ವರದಿ ಸಂಪೂರ್ಣ ಜಾರಿಗೆ ಸರ್ಕಾರ ಈಗಾಗಲೇ ನಿರ್ಣಯಿಸಿದೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾಜನ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವ ನಿಲುವನ್ನು ಕರ್ನಾಟಕ ಸರ್ಕಾರವು 1976ರಲ್ಲಿಯೇ ಕೈಗೊಂಡಿರುವುದರಿಂದ, ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ನಿರ್ಣಯ ಅಂಗೀಕರಿಸುವ ಕುರಿತು ಕನ್ನಡ ಸಂಘಟನೆಗಳು ಸಲ್ಲಿಸಿದ್ದ ಮನವಿ, ಪಾಲಿಕೆ ಆಯುಕ್ತರ ಅಭಿಪ್ರಾಯ ಹಾಗೂ ವಿಧಾನಮಂಡಲದ ಹಿಂದಿನ ನಿರ್ಣಯಗಳನ್ನು ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಈ ವರದಿ ಕಳುಹಿಸಿದ್ದಾರೆ.

ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಮಹಾಜನ ಆಯೋಗದ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂಬ ನಿರ್ಣಯ ಈಗಾಗಲೇ ಅಂಗೀಕಾರಗೊಂಡಿದೆ. ಅಲ್ಲದೆ, 2022ರ ಡಿಸೆಂಬರ್ 22ರಂದು ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲೂ ಮಹಾಜನ ಆಯೋಗದ ವರದಿಯೇ ರಾಜ್ಯದ ಹಿತರಕ್ಷಣೆಗೆ ಸಮರ್ಥವಾದ ದಾಖಲೆ ಎಂಬ ನಿಲುವನ್ನು ಪುನರುಚ್ಚರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಹಾರಾಷ್ಟ್ರ ಸರ್ಕಾರವು ಗಡಿ ವಿವಾದವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿರುವುದರಿಂದ ಪ್ರಕರಣ ನ್ಯಾಯಾಂಗದ ವಿಚಾರಣೆಯಲ್ಲಿದೆ. ಆದಾಗ್ಯೂ, ಮಹಾಜನ ಆಯೋಗದ ವರದಿ ಕುರಿತು ಕರ್ನಾಟಕದ ನಿಲುವು ಸ್ಪಷ್ಟವಾಗಿದ್ದು, ರಾಜ್ಯ ಸರ್ಕಾರವು ಹಿಂದೆ ಕೈಗೊಂಡ ನಿರ್ಣಯದ ಅನ್ವಯವೇ ಕ್ರಮ ವಹಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ವರದಿಯ ಕೊನೆಯ ಸಾಲಿನಲ್ಲಿ, “ಕರ್ನಾಟಕ ಸರ್ಕಾರದಿಂದ ಈಗಾಗಲೇ 1976ರಲ್ಲಿ ಮಹಾಜನ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಬೇಕೆಂದು ನಿರ್ಣಯಿಸಲಾಗಿರುವ ಕಾರಣ, ಅದರಂತೆ ಕ್ರಮ ವಹಿಸಬಹುದಾಗಿದೆ” ಎಂದು ಸ್ಪಷ್ಟವಾಗಿ ಶಿಫಾರಸು ಮಾಡಲಾಗಿದೆ. ಈ ಅಭಿಪ್ರಾಯವು ಬೆಳಗಾವಿ ಮಹಾನಗರ ಪಾಲಿಕೆಯ ನಿರ್ಣಯ ಕುರಿತ ಸರ್ಕಾರದ ಮುಂದಿನ ತೀರ್ಮಾನಕ್ಕೆ ಮಹತ್ವದ ಆಧಾರವಾಗಲಿದೆ.******************************

Leave a Reply

Your email address will not be published. Required fields are marked *

Back to top button