ಮೂಢನಂಬಿಕೆಯೇ ಇವತ್ತಿನ ರಾಕ್ಷಸರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರ ಹೇಳಿಕೆ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ಮಹಿಳೆಯರ ಪಾಲಿಗೆ ಮೂಢನಂಬಿಕೆಯೇ ರಾಕ್ಷಸ. ಇಂದಿನ ಆಧುನಿಕ ಕಾಲದಲ್ಲೂ ಊರು ಊರುಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಮೂಢನಂಬಿಕೆಯಂಥ ರಾಕ್ಷಸ ಪದ್ಧತಿಯನ್ನು ನೋಡುತ್ತಿದ್ದೇವೆ. ಅದರ ವಿರುದ್ಧ ಹೋರಾಟ ಮಾಡೋಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕರೆ ನೀಡಿದರು.
ಬೆಂಗಳೂರು ಖಾಸಗಿ ಹೋಟೆಲ್ ನಲ್ಲಿ ಜೆಡಿ ಮೀಡಿಯಾ ಹೌಸ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನಡೆದ *’ಸಾಧಕಿ’* ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಮಹಿಳೆ ಕೇವಲ ಸಾಧಕಿ, ಕ್ಷಮಯಾಧರಿತ್ರಿ ಮಾತ್ರವಲ್ಲ. ಗಂಡಸರ ಭುಜಕ್ಕೆ ಭುಜಕೊಟ್ಟು ಸಮಾನವಾಗಿ ಬೆಳೆದಿದ್ದಾಳೆ ಎಂದರು.
ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಇದ್ದಾರೆ. ಮಹಿಳೆಯರು ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ವಿದ್ಯಾಭ್ಯಾಸ ನೀಡೋಣ. ಗಂಡ ಮಾಡಿದ ಸಾಧನೆಯನ್ನು ಹೆಂಡತಿ ತುಂಬಾ ಸಂಭ್ರಮಿಸುತ್ತಾಳೆ. ಇಂಥ ಪ್ರವೃತ್ತಿ ಎಲ್ಲಾ ಮಹಿಳೆಯರಲ್ಲೂ ಬರಬೇಕು ಎಂದರು.
ಇಂದಿನ ಆಧುನಿಕ ಮಹಿಳೆ ತನ್ನ ಸಾಧನೆಗೆ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಪುರುಷರಿಗೆ ಸರಿಸಮನಾಗಿ, ಹಲವು ಕ್ಷೇತ್ರಗಳಲ್ಲಿ ಅವರನ್ನೂ ಮೀರಿಸುವ ರೀತಿಯಲ್ಲಿ ಸಾಧನೆ ಮಾಡುವ ಮೂಲಕ ಇಂದು ಮಹಿಳೆ ದಿಟ್ಟತನವನ್ನು ಪ್ರದರ್ಶಿಸುತ್ತಿದ್ದಾಳೆ. ಸಮಾಜದಲ್ಲಿರಬಹುದು, ಕುಟುಂಬದಲ್ಲಿರಬಹುದು ಸಂಕಷ್ಟ ಎದುರಾದಾಗಲೆಲ್ಲ ಗಟ್ಟಿಯಾಗಿ ನಿಂತು ಎದುರಿಸುವವಳು ಮಹಿಳೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಈ ವೇಳೆ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ, ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್, ಚಿತ್ರ ನಟರಾದ ಅನಿರುದ್ಧ್ ಜತ್ಕರ್, ನಟಿ ಸಂಪದ, ಕಾರ್ಯಕ್ರಮದ ಆಯೋಜಕರಾದ ಜೆ.ಡಿ.ಮೀಡಿಯಾ ಹೌಸ್ನ ಎಂಡಿ ಅನಿತಾ ಗೌಡ, ಹೇಮಾ ಸಾಗರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.*************************