ಪ್ರಕೃತಿ ಬೆಳಗಾವಿ

ಯುವ ಚೇತನದಲ್ಲಿ ಸಾಧನೆಯ ಛಲಬೇಕು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ನಿಲಯದ ವಿದ್ಯಾರ್ಥಿಗಳು ಸಿದ್ಧರಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು…!!

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ ಮಾ.04: ಪದವಿ ಹಂತದಲ್ಲಿಯೇ ಯುವಕ, ಯುವತಿಯರು ಐಎಎಸ್, ಐಪಿಎಸ್‍ದಂತಹ ಪರೀಕ್ಷೆಗಳಿಗೆ ಸಿದ್ಧತೆ ಆರಂಭಿಸಬೇಕು. ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಯುವ ಚೇತನದಲ್ಲಿ ಭಾಗವಹಿಸಿ, ಸಾಧಿಸುವ ಛಲದಿಂದ ಪ್ರತಿಜ್ಞೆ ಮಾಡಬೇಕೆಂದು ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಕೆಸಿಡಿ ಆವರಣದಲ್ಲಿರುವ ಸೃಜನಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ವಸತಿನಿಲಯಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ಧತೆ ಕುರಿತು ಆರಂಭವಾಗಿರುವ ಯುವ ಚೇತನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಪ್ರತಿ ತಿಂಗಳು ಯುವಚೇತನ ಕಾರ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ತಜ್ಞರು, ತರಬೇತಿದಾರರು ಮತ್ತು ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳ ಮೂಲಕ ಮಾಹಿತಿ ನೀಡಲಿದ್ದಾರೆ. ವಸತಿ ನಿಲಯಗಳಲ್ಲಿ ಬಡ, ಮಧ್ಯಮ ಕುಟುಂಬದ ವಿದ್ಯಾರ್ಥಿಗಳು ಹೆಚ್ಚಾಗಿ ಇರುವದರಿಂದ ಅವರಿಗೆ ಉತ್ತಮ ತರಬೇತಿ ನೀಡುವ ಉದ್ದೇಶದಿಂದ ಉಚಿತವಾಗಿ ಈ ಯುವ ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಪದವಿ ಶಿಕ್ಷಣದ ಹಂತ ಜೀವನದಲ್ಲಿ ಬಹು ಮುಖ್ಯವಾದ ಕಾಲಘಟ್ಟ. ವಿದ್ಯಾರ್ಥಿಗಳು ಓದು, ಸಾಧನೆ ಬಿಟ್ಟು ಬೇರೆಡೆ ಚಿಂತಿಸಬಾರದು. ಜೀವನದ ಗುರಿ ತಲುಪಿದಾಗ ನೆಮ್ಮದಿ ಸೀಗುತ್ತದೆ. ವಿದ್ಯಾರ್ಥಿಗಳಲ್ಲಿ ಮುನ್ನುಗ್ಗುವ, ಸಾಧನೆ ಮಾಡುವ ಹಠ, ಛಲ ಇರಬೇಕೆಂದು ಅವರು ಹೇಳಿದರು.

ಯುವ ಚೇತನ ಉದ್ಘಾಟಿಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳು ಸ್ವಯಂ ನಿರ್ಧಾರ ಮತ್ತು ದೃಢತೆಯಿಂದ ಸಿದ್ಧರಾಗಬೇಕು. ಪರೀಕ್ಷಾ ಸಿದ್ಧತೆ ಆರಂಭದಿಂದ ವ್ಯವಸ್ಥಿವಾಗಿ ಆಗಬೇಕು. ಇನ್ನೊಬ್ಬರನ್ನು ನೋಡಿ, ಬರಿ ಆಸೆ ಪಟ್ಟು ಬರೆಯುವ ಪರೀಕ್ಷೆ ಅಲ್ಲ. ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮ ಮುಖ್ಯವಾಗಿದೆ ಎಂದು ತಿಳಿಸಿದರು.

ಐಎಎಸ್, ಐಪಿಎಸ್ ಪರೀಕ್ಷೆಗಳ ಸಿದ್ಧತೆ ಕುರಿತು ತಮ್ಮ ಅನುಭವಗಳೊಂದಿಗೆ ವಿವರಿಸಿದರು. ವರ್ಷದಿಂದ ವರ್ಷಕ್ಕೆ ಸ್ಪರ್ಧೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು ದೃಢವಿಶ್ವಾಸದಿಂದ ಪರೀಕ್ಷೆಗಳಿಗೆ ಸಿದ್ಧರಾಗಬೇಕೆಂದು ಹೇಳಿದರು.

ನಂತರ ಪ್ರಸಿದ್ಧ ಪ್ರೇರಣಾ ಭಾಷಣಕಾರ ಪ್ರದೀಪ್ ಆಚಾರ್ಯ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿದಾರ ಗುರುರಾಜ ಬುಲಬಲೆ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಅವರು ಸ್ವಾಗತಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗೋಪಾಲ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಾಧರ ದೊಡ್ಡಮನಿ ವಂದಿಸಿದರು.

ಯುವ ಚೇತನ ಕಾರ್ಯಾಗಾರದಲ್ಲಿ ವಿವಿಧ ಇಲಾಖೆಗಳ ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ನಿಲಯಪಾಲಕರು ಭಾಗವಹಿಸಿದ್ದರು.************************

Leave a Reply

Your email address will not be published. Required fields are marked *

Back to top button